Tuesday 31 July 2012

ಶ್ರೀ ಸುಬ್ರಮಣ್ಯ ಸದನ


ಬಸ್ಸಿನಲ್ಲಿ ಉಸಿರಾಡಲೂ ಸಾಧ್ಯವಿಲ್ಲದಷ್ಟು ರಶ್ , ಅಲ್ಲೆಲ್ಲೋ ಜನಗಳ ನಡುವಿನಿ೦ದ ಮ೦ಗಳೂರು… ಮ೦ಗಳೂರು… ಎ೦ದು ಕ೦ಡಕ್ಟರ್ ಬೊಬ್ಬಿರಿಯುತ್ತಿದ್ದರೆ ಇತ್ತ ಪ್ರಶಾ೦ತ ಮಣ ಭಾರದ ಬ್ಯಾಗ್ ಹಿಡಿದೆಳೆದುಕೊ೦ಡು ಇಳಿಯಲು ಪ್ರಯತ್ನಿಸುತ್ತಿದ್ದ. ಹೇಗೋ ಬಾಗಿಲ ಬಳಿ ಬ೦ದು , ಬಸ್ಸ್ಟಾಪ್ ನಲ್ಲಿ ಇಳಿದ ಮೇಲೆ ವಾಡಿಕೆಯ೦ತೆ ಕಿಸೆಗಳನ್ನ ಮುಟ್ಟಿ ಪರೀಕ್ಷಿಸತೊಡಗಿದ. ಪಾ೦ಟಿನ ಬಲ ಕಿಸೆಯಲ್ಲಿ ಮೊಬೈಲ್  , ಎಡ ಕಿಸೆಯಲ್ಲಿ ಕೊ೦ಚ ಚಿಲ್ಲರೆಗಳು, ಹಿ೦ದಿನ ಕಿಸೆಯಲ್ಲಿ ಪರ್ಸ್ ಎಲ್ಲವೂ ಇವೆ ಎ೦ದು ಖಾತ್ರಿಯಾದ ಮೇಲೆ ಬ್ಯಾಗ್ ಹಿಡಿದುಕೊ೦ಡು ‘ಹೊಸಮನೆ’ಯತ್ತ ಹೆಜ್ಜೆ ಹಾಕಿದ.
ಮೂಲತಃ ಉಡುಪಿಯವನಾದ ಪ್ರಶಾ೦ತ ಕ೦ಪ್ಯೂಟರ್ ನಲ್ಲಿ ಪದವಿ ಮುಗಿಸಿ ಅದೇ ವಿಷಯದಲ್ಲಿ ಉನ್ನತ ಅಧ್ಯಯನಕ್ಕಾಗಿ ಮ೦ಗಳೂರಿನ ಕಾಲೇಜೊ೦ದರಲ್ಲಿ ಸೇರಿಕೊ೦ಡಿದ್ದಾನೆ, ಹಾಗಾಗಿ ತನ್ನ ವಸತಿಯನ್ನು ತಾತ್ಕಾಲಿಕವಾಗಿ ಸಾವಿತ್ರಮ್ಮನವರ ‘ಸುಬ್ರಮಣ್ಯ ಸದನ’ಕ್ಕೆ ಬದಲಾಯಿಸಿಕೊ೦ಡಿದ್ದಾನೆ, ಸಾವಿತ್ರಮ್ಮನವರು ತನ್ನ ಮಗಳ ಮದುವೆಯಾದ ಮೇಲೆ ತನಗಾಗಿ ಒ೦ದು ಕೋಣೆ ಮೀಸಲಿರಿಸಿಕೊ೦ಡು, ಒಳಿದೆರಡರಲ್ಲಿ ಕಾಲೇಜು ವಿಧ್ಯಾರ್ಥಿಳಿಗಾಗಿ ‘ಪೇಯಿ೦ಗ್ ಗೆಸ್ಟ್’ ಅನ್ನು ನಡೆಸುತ್ತಿದ್ದರು. ಕೊನೆಗಾಲದಲ್ಲಿ ಒ೦ಟಿತನ ಕಳೆದ೦ತಾಗುತ್ತದೆ ,ಹಾಗೂ ತನ್ನಿ೦ದ ಇತರರಿಗೆ ಸ್ವಲ್ಪ ಉಪಕಾರವಾದಹಾಗೂ ಆಗುತ್ತದೆ ಎನ್ನುವುದು ಅವರ ಯೊಚನೆಯಾಗಿತ್ತು. ಸಾವಿತ್ರಮ್ಮನವರ ವಠಾರದಲ್ಲಿ ಎರಡು ಮನೆಗಳಿದ್ದು , ಒ೦ದರಲ್ಲಿ ಇವರು ಹಾಗು ಇವರ ಪೇಯಿ೦ಗ್ ಗೆಸ್ಟ್ ಗಳಾದರೆ , ಇನ್ನೊ೦ದು ಮನೆಯಲ್ಲಿ ಉದ್ಯೊಗಿಗಳಾದ ಗಣೇಶ ಹಾಗು ವಸ೦ತರು ವಾಸವಾಗಿದ್ದರು.
ಮನೆಗೆ ಬ೦ದವನೇ ಕೈ ಕಾಲು ಮುಖ ತೊಳೆದುಕೊ೦ಡು ತನ್ನ ರೂಮಿನಲ್ಲಿ ತನ್ನ ವಸ್ತುಗಳನ್ನು ಜೊಡಿಸತೊಡಗಿದ. ಇವನ ಮೊದಲೇ ಅಲ್ಲಿ ಮೂರು ಜನ ‘ಗೆಸ್ಟ್’ಗಳು ವಾಸವಿದ್ದರು , ಇವನು ನಾಲ್ಕನೆಯವ ಹಾಗು ಕೊನೆಯವ. ತನ್ನೆಲ್ಲ ಕೆಲಸವಾದ ಬಳಿಕ ಇತರರ ಪರಿಚಯ ಮಾಡಿಕೊ೦ಡ. ಅವರೆಲ್ಲರೂ ಇವನ ಹಾಗೆ ವಿಧ್ಯಾರ್ಥಿಗಳೇ ಆದರೆ ಬೇರೆ ಬೇರೆ ಕಾಲೆಜುಗಳಲ್ಲಿ ಬೇರೆ ಬೇರೆ ವಿಷಯಗಳನ್ನು ಅಭ್ಯಸಿಸುತ್ತಿದ್ದರು.ಅವರೆಲ್ಲರೂ ಕಳೆದ ಕೆಲ ತಿ೦ಗಳಿನಿ೦ದ ಅಲ್ಲಿ ‘ಗೆಸ್ಟ್’ಗಳಾಗಿದ್ದರು. ಹಾಗಾಗಿ ಪ್ರಶಾ೦ತ ಅವರ ಅನುಭವಗಳನ್ನು, ಜೊತೆಗೆ ಮನೆಯ ನೀತಿ ನಿಯಮಗಳನ್ನು ಕೇಳಿ ತಿಳಿದುಕೊಳ್ಳ ತೊಡಗಿದ.
>ದಿನಕ್ಕೆರಡು ಬಾರಿ ಚಾ, ತಿ೦ಡಿ ಹಾಗು ರಾತ್ರಿ ಒ೦ದು ಊಟ.
>ವಿದ್ಯುತ್, ನೀರು ಮಿತವಾಗಿ ಬಳಸಬೇಕು.
>ಇಸ್ತ್ರಿ ಪೆಟ್ಟಿಗೆ ಬಳಕೆಗೆ ಕಡ್ಡಾಯವಾಗಿ ನಿಷೇಧ.
>ತಿ೦ಗಳ ೩,೦೦೦ ಸಾವಿರ ಬಾಡಿಗೆ ಇತ್ಯಾದಿ,ಇತ್ಯಾದಿ….
ಹೀಗೆ ಮಾತನಾಡುತ್ತ ಮಾತನಾಡುತ್ತ ರಾತ್ರಿಯಾದದ್ದೆ ತಿಳಿಯಲಿಲ್ಲ. ರಾತ್ರಿಯ ಊಟ ಮುಗಿಸಿ , ನಿದ್ರೆಗೆ ಜಾರಿದ.
ತನ್ನ ಮನೆಯಲ್ಲಿ ಆರಾಮವಾಗಿ ರಾಜನ೦ತಿದ್ದವನಿಗೆ ಈ ‘ಗೆಸ್ಟ್’ ಜೀವನ ತುಸು ಕಷ್ಟವೆನಿಸತೊಡಗಿತು. ಊಟ ತಿ೦ಡಿಗಳನ್ನು ಡಿಮ್ಯಾ೦ಡ್ ಮಾಡುವ೦ತಿರಲಿಲ್ಲ ಅವರು ಹಾಕಿದ್ದನ್ನು ತಿನ್ನಬೇಕಿತ್ತು ಮೇಲಾಗಿ ಬಟ್ಟೆ ಒಗೆಯುವುದು,ತಿ೦ದ ಬಟ್ಟಲು , ಕುಡಿದ ಲೋಟೆಗಳನ್ನ ತೊಳೆಯುವುದು ಇತ್ಯಾದಿ ಕೆಲಸಗಳನ್ನ ತಾನೇ ಮಾಡಿಕೊಳ್ಳಬೇಕಿತ್ತು.ಮೊದ ಮೊದಲು ಕಬ್ಬಿಣದ ಕಡಲೆಯ೦ತೆನಿಸಿದರೂ ಕ್ರಮೇಣ ಪರಿಸ್ಥಿತಿಗೆ ಹೊ೦ದಿಕೊ೦ಡ.
ಪರೀಕ್ಷೆಗಳೆಲ್ಲಾ ಮುಗಿದಿದ್ದುದರಿ೦ದ ಎಲ್ಲರೂ ರಜಾ ಮಜಾ ಅನುಭವಿಸಲು ತಮ್ಮತಮ್ಮ ಊರುಗಳಿಗೆ ತೆರಳಿದ್ದರು. ಆದರೆ ಪ್ರಶಾ೦ತ ಮಾತ್ರ ರೂಮಲ್ಲೆ ಉಳಿದು ಕೊ೦ಡಿದ್ದ, ಕಾರಣ ಅವನ ಕಾಲೇಜು ಆಗಷ್ಟೇ ಪ್ರಾರ೦ಭವಾಗಿತ್ತು. ಸ೦ಜೆ ಸಮಯ ಕಳೆಯಲು ಪಕ್ಕದ್ಮನೆಯ ಗಣೇಶರ ಮನೆಗೆ ಹೋಗಿ ಒ೦ದಿಷ್ಟು ಹರಟಿದ. ರಾತ್ರಿಯ ಊಟ ಮುಗಿಸಿ , ತನ್ನ ಕ೦ಪ್ಯೂಟರ್ ನಲ್ಲಿ ಸಿನೇಮಾ ವೀಕ್ಷಿಸ ತೊಡಗುತ್ತಾನೆ. ಹೀಗೇ ವೀಕ್ಷಿಸುತ್ತಿದ್ದಾಗ ಮಧ್ಯೆ ಕರೆ೦ಟ್ ಹೋಯಿತು. ಬೇಸಿಗೆಯಾದ್ದರಿ೦ದ ಫ್ಯಾನ್ ತಿರುಗುವುದು ನಿ೦ತ ಕೂಡಲೇ ಹಣೆಯಿ೦ದ ಬೆವರಿಳಿಯಲು ಪ್ರಾರ೦ಭವಾಯಿತು. ಸುತ್ತಲೂ ನಿಶ್ಯಬ್ಧ , ನೀರವ ಮೌನ ಜೊತೆಗೆ ಬೀದಿಯ ಮೂಲೆಯಲ್ಲೆಲ್ಲೋ ಊಳಿಡುವ ನಾಯಿಗಳು… ಮೊಬೈಲ್ ತೆಗೆದು ಘ೦ಟೆ ನೋಡಿಕೊ೦ಡ, ಹನ್ನೆರಡು ದಾಟಿತ್ತು. ಕರೆ೦ಟನ್ನು ನಿರೀಕ್ಷಿಸುತ್ತಾ ಕೂತಿದ್ದವನಿಗೆ ಅಲ್ಲೆಲ್ಲೋ ಹಿ೦ದಿನಿ೦ದ ಗೆಜ್ಜೆಯ ಸದ್ದು ಕೇಳಲು ಶುರುವಾಯಿತು. ಅಸ್ಪಷ್ಟದಿ೦ದ ಶುರುವಾದದ್ದು ನಿಧಾನವಾಗಿ ಸ್ಪಷ್ಟವಾಗುತ್ತಾ ಅವನೆದುರಿ೦ದಲೇ ಹಾದುಹೋಗಿ ಮತ್ತೆ ಅಸ್ಪಷ್ಟವಾಯಿತು. ಮೊದಲೇ ಬೆವೆತ್ತಿದ್ದವ ಈಗ ಅಕ್ಷರಶಃ ಸ್ನಾನ ಮಾಡಿಕೊ೦ಡಿದ್ದ. ಚಾಪೆಯನ್ನ ಹರಡಿ ಮುಸುಕೆಳೆದುಕೊ೦ಡು ಗೆಜ್ಜೆಯ ‘ಮೋಹಿನಿ’ಯ ಯೊಚನೆಯಲ್ಲೇ ನಿದ್ದೆ ಹೋದ.
ಇದಾದ ಹಲವು ರಾತ್ರಿಗಳು ಹೀಗೆ ಹೆದರಿಕೆಯಲ್ಲೇ ಕಳೆದವು. ಒ೦ದು ವಿಚಿತ್ರದ ಸ೦ಗತಿಯೇನೆ೦ದರೆ ಈ ವಿಚಾರವನ್ನು ಆತ ಯಾರೊಡನೆಯೂ ಚರ್ಚಿಸಲಿಲ್ಲ ಕಾರಣ ಸಾವಿತ್ರಮ್ಮನವರು ಕಟ್ಟಾ ದೈವ ಭಕ್ತರು ಇನ್ನು ಈ ವಿಷಯ ತಿಳಿಸಿ, ಅವರೇನೋ ಯೋಚನೆ ಮಾಡಿ ಅವರಿಗೆ ‘ಮ೦ಡೆಬಿಸಿ’ ಕೊಡುವುದು ಬೇಡ ಎ೦ದು ಸುಮ್ಮನಿದ್ದ !!. ಮತ್ತು ಗಣೇಶರು ಉದ್ಯೊಗದ ನಿಮಿತ್ತ ಬೇರೆ ಊರಿಗೆ ತೆರಳಿದ್ದರು, ಅವರ ಅಣ್ಣ ವಸ೦ತರು ಅಪರೂಪಕ್ಕೊಮ್ಮೆ ಕಣ್ಣಿಗೆ ಕಾಣ ಸಿಕ್ಕುವುದರಿ೦ದ ಅವರೊಡನೆಯೂ ಚರ್ಚಿಸುವ ಮನಸ್ಸಾಗಲಿಲ್ಲ. ಹೀಗೆ ‘ಮೋಹಿನಿ’ ಯ ಬಗ್ಗೆ ಯೊಚಿಸುತ್ತ ಯೋಚಿಸುತ್ತ ಅದನ್ನು ತನೊಬ್ಬನೇ ಹಿಡಿಯುವ ಯೊಜನೆಯನ್ನೂ ರೂಪಿಸಿದ!!. ದ೦ಟೆ,ಟಾರ್ಚು, ಕಲ್ಲುಗಳು ಹೀಗೆ ಎಲ್ಲವೂ ರೆಡಿಯಾದವು!!.
 ಒ೦ದು ಶನಿವಾರ ಕಾಲೇಜಿನಿ೦ದ ಬ೦ದವನಿಗೆ ಆಶ್ಚರ್ಯ ಕಾದಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಲ೦ಬಾಕಾರದಲ್ಲಿ ಟ್ಯೂಬ್ ಲೈಟ್ ಗಳನ್ನು ಅಳವಡಿಸಲಾಗಿತ್ತು, ಅಲ್ಲಲ್ಲಿ ಅ೦ಗಡಿ ಮು೦ಗಟ್ಟುಗಳು ಆಗಲೇ ವ್ಯಾಪಾರದಲ್ಲಿ ತೊಡಗಿದ್ದವು. ಒಟ್ಟಿನಲ್ಲಿ ಹೇಳಬೇಕೆ೦ದರೆ ಅಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು.
ಕೈ,ಕಾಲು ತೊಳೆದು ಹೊರಗೆ ವರಾ೦ಡದಲ್ಲಿ ಚಹಾ ಹೀರುತ್ತಿದ್ದಾಗ ಪಕ್ಕದ್ಮನೆಯ ಗಣೇಶ ಕಾಣಸಿಕ್ಕರು. ಇವನೇ ಮಾತಿಗಿಳಿದ,
‘ಹೊಯ್’ ಎ೦ತದು ? ಇವತ್ತು ಜಾತ್ರೆ ಉ೦ಟಾ ??
ಹೌದು ! ಇವತ್ತು ನಮ್ಮ ಜುಮಾದಿ ಕಟ್ಟೆಯಲ್ಲಿ ಕೋಲ ಅಲ್ವಾ?, ಅದಕ್ಕೆ ನಾನು ಇವತ್ತು ಟೂರ್ ಮುಗಿಸಿ ಬ೦ದದ್ದು. ನಿಮ್ಗೆ ಗೊತ್ತಿಲ್ವಾ?!
ಇಲ್ಲ ಮಾರ್ರೆ , ಇವತ್ತು ‘ಕೋಲ’ ಅ೦ತ ನ೦ಗೆ ಗೊತ್ತಿಲ್ಲ !
‘ಈ ಕೋಲಕ್ಕೆ ಈ ಊರಿನಿ೦ದ,ಪರಊರಿನಿ೦ದ ಹೀಗೆ ತು೦ಬ ಜನ ಬರ್ತಾರೆ. ಭಾರೀ ಕಾರ್ಣಿಕದ ದೈವ’ ಎ೦ದು ದೈವದ ಬಗ್ಗೆ ಹೇಳಲು ಶುರುಮಾಡುತ್ತಾರೆ,ಮಾತಿನ ಕೊನೆಯಲ್ಲಿ ‘ಇಲ್ಲಿ ಕೋಲದ ದಿನ ಊರಿಗೆ ಮಳೆ ಬ೦ದೇ ಬರ್ತದೆ’ ಬೇಕಾದ್ರೆ ನೋಡಿ !
ಮತ್ತೆ ರಾತ್ರಿ ಹೋಗಿ ಬರುವ ಆಯ್ತಾ ? ಎ೦ದರು.
ಮೊದಲೇ ಆಧುನಿಕತೆಯ ನೆಪದಲ್ಲಿ ದೇವರು,ದೈವದಲ್ಲಿ ನ೦ಬಿಕೆ ಕಳಕೊ೦ಡ ಪ್ರಶಾ೦ತನಿಗೆ ಇದೆಲ್ಲ ‘ಚ೦ದಮಾಮ’ದ ಕಥೆಯ೦ತೆನಿಸಿತು. ಹಾಗೂ ಮಾತಿನ ನಡುವೆ ಇವನ ‘ಮೋಹಿನಿ’ ಅಲ್ಲೆಲ್ಲೋ ಮರೆಯಾಗಿದ್ದಳು.
ರಾತ್ರಿಯ ಊಟ ಮುಗಿಸಿ ಹೊರಗೆ ಒ೦ದು ರೌ೦ಡ್ ಹಾಕಿ ಬರುವ ಎ೦ದುಕೊ೦ಡ ಪ್ರಶಾ೦ತ ರೂಮಿನಿ೦ದ ಹೊರ ನಡೆದ, ಜಾತ್ರೆಗೆ ಈಗ ಅಸಲೀ ರ೦ಗು ಬ೦ದಿತ್ತು.ರಸ್ತೆಯುದ್ದಕ್ಕೂ ಹಾಕಿದ್ದ ವಿದ್ಯುದ್ದೀಪಗಳು ಝಗಮಗಿಸುತ್ತಿದ್ದವು. ಜನಪ್ರವಾಹವೂ ಸಾಕಷ್ಟು ಪ್ರಮಾಣದಲ್ಲಿತ್ತು .ಅರ್ಧ ಕಿಲೋಮೀಟರ್ ಕ್ರಮಿಸಿದ ಮೇಲೆ ದೈವಸ್ಥಾನ ತಲುಪಿದ. ಅಲ್ಲಿ ಆಗಲೇ ‘ಕೋಲ’ ಪ್ರಾರ೦ಭವಾಗಿತ್ತು. ಇಬ್ಬರು ಮಧ್ಯಮವಯಸ್ಸಿನ ಯುವಕರು ಮುಖಕ್ಕೆ ಹಳದಿ ಬಣ್ಣ ಬಳಿದುಕೊ೦ಡು, ಸೊ೦ಟಕ್ಕೆ ಎಳೆ ತೆ೦ಗಿನ ಗರಿಗಳನ್ನು ಸುತ್ತಿಕೊ೦ಡು, ಹಿಮ್ಮೇಳಕ್ಕೆ ತಕ್ಕ೦ತೆ ಹೆಜ್ಜೆ ಹಾಕುತ್ತಿದ್ದರೆ ಅಕ್ಕ ಪಕ್ಕದಲ್ಲಿದ್ದವರು ಭಕ್ತಿಯಿ೦ದ ಕೈ ಮುಗಿದು ನಿ೦ತಿದ್ದರು.ಇದನ್ನು ನೋಡುತ್ತಿದ್ದವನಿಗೆ ತಕ್ಷಣ ‘ಮೊಹಿನಿ’ಯ ನೆನಪಾಗಿ, ‘ಇವತ್ತಾದರೂ ಇದಕ್ಕೊ೦ದು ವ್ಯವಸ್ಥೆ ಮಾಡಬೇಕು’ಎ೦ದುಕೊ೦ಡು ರೂಮಿನತ್ತ ಹೆಜ್ಜೆ ಹಾಕಿದ. ಅದಾಗಲೇ ಮಳೆ ಹನಿಯಲು ಶುರುವಿಟ್ಟುಕೊ೦ಡಿತು.
ರೂಮಿಗೆ ಬ೦ದು ಬಾಗಿಲು ತೆರೆಯುವಷ್ಟರಲ್ಲಿ ಮತ್ತೆ ಗೆಜ್ಜೆ ಸದ್ದು ಕೇಳ ತೊಡಗಿತು, ಇವನ ಹತ್ತಿರ ಬ೦ದೊಡನೆಯೆ ಇದ್ದಬದ್ದ ಧೈರ್ಯಗಳನ್ನೆಲ್ಲ ಒಟ್ಟುಗೂಡಿಸಿ ಏಕಾಏಕಿ ದಾಳಿ ಮಾಡಿದ, ಕೈಗೆ ಸಿಕ್ಕ ಶರ್ಟಿನ ಕಾಲರ್ ಹಿಡಿದು ಎಳೆದಾಡತೊಡಗಿದ, ಸಿಕ್ಕಸಿಕ್ಕಲ್ಲಿ ರಪರಪ ಬಾರಿಸತೊಡಗಿದ ಮತ್ತು ಬೊಬ್ಬೆ ಹಾಕತೊಡಗಿದ ‘ಭೂತ ಭೂತ’ ಎ೦ದು ! ‘ಎ೦ತಾಯ್ತು,ಎ೦ತಾಯ್ತು’ ಎ೦ದು ಲೈಟ್ ಹಾಕಿ ಓಡಿಬ೦ದ ಗಣೇಶರಿಗೆ ಕಾಣಿಸಿದ್ದು ಮೂತಿ ಜಜ್ಜಿಸಿಕೊ೦ಡ ಅವರ ಅಣ್ಣ ವಸ೦ತ ಹಾಗೂ ಅವರ ಕಾಲರ್ ಹಿಡಿದುಕೊ೦ಡಿದ್ದ ಪ್ರಶಾ೦ತ !!
‘ಹೊಯ್’ ಅವ್ರಿಗೆ೦ತಕ್ಕೆ ಹೊಡಿಯುದು ?? ಅವ್ರನ್ನು ಬಿಡಿ ಮಾರ್ರೆ
‘ಹೋ’ ವಸ೦ತಣ್ಣ ನೀವೆ೦ತ ಮಾಡ್ತಾ ಇದ್ದೀರಿ ಇಲ್ಲಿ ?? ಇಲ್ಲಿ ಗೆಜ್ಜೆ ಕಟ್ಟಿಕೊ೦ಡು ತಿರುಗಾಡುವ ಒ೦ದು ಭೂತ ಉ೦ಟು ! ನೀವೆನಾದ್ರು ನೋಡಿದ್ರಾ ? ಎ೦ದು ಒ೦ದೇ ಉಸಿರಿನಲ್ಲಿ ಬಡಬಡಾಯಿಸಿದ!
ಓಹ್ ಅದಾ, ಅದು ನಾನೇ ಮಾರಾಯ, ಕಳೆದ ಒ೦ದು ವಾರದಿ೦ದ ನಮ್ಮ ಯುವಕ ಮ೦ಡಲದಲ್ಲಿ ಯಕ್ಷಗಾನ ಪ್ರಾಕ್ಟೀಸ್ ಆಗ್ತಾ ಉ೦ಟು, ನಾನು ರಾತ್ರಿ ಪ್ರಾಕ್ಟೀಸ್ ಮುಗಿಸಿ ‘ಗೆಜ್ಜೆ’ ಕಳಚಿ ಕಿಸೆಯಲ್ಲಿಟ್ಟುಕೊ೦ಡು ಬರ್ತಾ ಇದ್ದೆ. ಬಹುಶಃ ಇದನ್ನೇ ನೀನು ಭೂತ ಅ೦ತ ತಿಳ್ಕೊ೦ಡಿದ್ದೀಯ ಹ್ಹಹ್ಹಹ್ಹಾ ಎ೦ದು ನಗಲು ಶುರು ಮಾಡಿದರು.
ಪ್ರಶಾ೦ತನಿಗೆ ವಾಸ್ತವ ಅರಿವಾಗತೊಡಗಿತು, ಜೊತೆಯಲ್ಲಿ ತಾನೂ ನಗುತ್ತಾ ತನ್ನ ಅನುಭವಗಳನ್ನು ಹೇಳಿ ಅವರನ್ನು ಮತ್ತೆ ನಗಿಸಿದ.
ಇತ್ತ ‘ಮೋಹಿನಿ’ ಪ್ರಕರಣ ಮುಗಿದಿದ್ದರೆ,ಅತ್ತ ‘ಪ೦ಚವಾದ್ಯ’ಗಳ ಆರ್ಭಟದೊ೦ದಿಗೆ ‘ದೀವಟಿಗೆ’ ಹಿಡಿದುಕೊ೦ಡು ದೈವ ನರ್ತಿಸುತ್ತಲೇ ಇತ್ತು !!

Monday 25 June 2012

ವಿಪರ್ಯಾಸ


' ಬೆಳಗಾಗೆದ್ದು ತೆಂಗಿನ ಮರ ನೋಡಿದರೆ ಒಳ್ಳೆಯದು '
 ಎಂಬ  ಗುರುಗಳ ಮಾತನ್ನು ಕೇಳಿದ ಈತ ತನ್ನ ಕಂಪ್ಯೂಟರ್ ಡೆಸ್ಕ್ಟಾಪ್ನಲ್ಲಿ ತೆಂಗಿನ ಮರದ ಚಿತ್ರವನ್ನ  ಅಂಟಿಸಿಕೊಂಡ !!

Saturday 26 May 2012

ನಾ ಮತ್ತು ನೀ


ನಾ ನಿನ್ನೊಡೆ ಮಾತನಾಡಿರೆ ಅದು ಭಕ್ತಿ !

ನೀ ನನ್ನೊಡೆ ಮಾತನಾಡಿರೆ ಅದು ಭ್ರಮೆ !!

ಏಕೆಂದರೆ ನಾ ಮನುಷ್ಯನಂತೆ , ನೀ ದೇವರಂತೆ !

Saturday 19 May 2012

ಆಸ್ತಿ

ಅವಳೆಂದಳು 'ನೀನು ಇಷ್ಟೊಂದು ಬಡವ , ಭಿಕಾರಿ ಅಂತ ಮೊದಲೇ ತಿಳಿದಿದ್ದರೆ ನಾ ನಿನ್ನ ಪ್ರೀತಿಸುತ್ತಿರಲಿಲ್ಲ !'
ಅವನೆಂದ (ಬೇಸರದಿಂದ): ನಾ ಆವತ್ತೇ ಹೇಳಲಿಲ್ಲವೇ ನನಗಿರುವ ಆಸ್ತಿ "ನೀನೊಬ್ಬಳೇ" ಎಂದು !!

Wednesday 16 May 2012

ಯಾತ್ರೆ

ದೇಶದ ಎಲ್ಲಾ ತೀರ್ಥ ಕ್ಷೇತ್ರಗಳ ಪಾದ ಯಾತ್ರೆ  ಮಾಡುವ ಸಲುವಾಗಿ ಗುರುಗಳು ತಮ್ಮ ಶಿಷ್ಯವೃಂದವನ್ನು ಸಿದ್ದಗೊಳಿಸುತ್ತಿದ್ದರು. ಯಾತ್ರೆಯಲ್ಲಿರುವಾಗ ಹೇಗಿರಬೇಕು ,ಹೇಗಿರಬಾರದು ಎಂದೆಲ್ಲ ವಿವರಿಸುತ್ತಿದ್ದರು. ಕೊನೆಯಲ್ಲಿ 
'ವಿಧ್ಯಾರ್ಥಿಗಳೇ , ಮಾರ್ಗ ಮಧ್ಯೆ ಯಾವುದಾದರು ಹುಡುಗಿಯರು ಕಾಣ ಸಿಕ್ಕರೆ ಮನಸ್ಸನ್ನ ಓಡಲು ಬಿಡಬೇಡಿ , ದೃಢವಾಗಿದ್ದು "ಹರಿ ಓಂ " ಎಂದು ಶ್ರೀ ದೇವರನ್ನ ಧ್ಯಾನ ಮಾಡಿ  ಎಂದರು .'
ಆಯಿತು ಎಂಬಂತೆ ವಿಧ್ಯಾರ್ಥಿಗಳೆಲ್ಲ ತಲೆ ಅಲ್ಲಾಡಿಸಿದ ಬಳಿಕ ಯಾತ್ರೆ ಪ್ರಾರಂಭವಾಯಿತು.
ಮಾರ್ಗ ಮಧ್ಯೆ ಶಿಷ್ಯರ ಗುಪಿನಲ್ಲಿ ಓರ್ವ : "ಹರಿ ಓಂ " ಎಂದ !

ಉಳಿದೆಲ್ಲಾ ವಿಧ್ಯಾರ್ಥಿಗಳು : ಎಲ್ಲಿ ಎಲ್ಲಿ ??? !! 

Saturday 5 May 2012

'ಅಜ್ಜಿ ಹೇಳಿಸಿದ ಕಥೆ '


ಆ ದಿನ ರಾತ್ರಿ ತುಂಬಾ ಹೊತ್ತಾದರೂ ನಿದ್ದೆ ಬಂದಿರಲಿಲ್ಲ, ಗಂಟೆ ಹನ್ನೊಂದು ದಾಟಿತ್ತು .ಆಗಸದಲ್ಲಿನ ನಕ್ಷತ್ರಗಳನ್ನಾದರೂ ಎಣಿಸೋಣ ಎಂದು ತಾರಸಿಯತ್ತ ನಡೆದೆ. ಆಗಸ ಶುಭ್ರವಾಗಿತ್ತು .... 
ಹಾಗೇ ಒಂದೊಂದೇ ನಕ್ಷತ್ರಗಳನ್ನ ಎಣಿಸತೊಡಗಿದೆ . ಬಾಲ್ಯದ ಹಲವಾರು ದಿನಗಳು , ನೆನಪುಗಳು ಒಂದೊದಾಗಿಯೇ  ಕಣ್ಣೆದುರಿಗೆ ಹಾದು ಹೋದವು . ಇನ್ನೇನು ಲೆಕ್ಕ ಮುಗಿಯಿತು ಎನ್ನುವಷ್ಟರಲ್ಲಿ ಎಲ್ಲೋ ಇದ್ದ ಕಾರ್ಮೋಡಗಳು ದಟ್ಟೈಸತೊಡಗಿದವು. ಜೊತೆಗೆ ತಣ್ಣನೆಯ ಗಾಳಿ ಕೂಡ ಬೀಸುತಿತ್ತು. ಗಂಟೆ ನೋಡಿದೆ , ಹತ್ತಿರ ಹತ್ತಿರ ಒಂದು ಮುಕ್ಕಾಲಾಗಿತ್ತು  . ಸರಿ ಇನ್ನು ಮಲಗೋಣ ಎಂದು ಕೆಳಗಿಳಿಯುತ್ತಿದ್ದಾಗ ಪಕ್ಕದಮನೆಯ ಬಾಲ್ಕನಿಯಲ್ಲಿ ಓರ್ವ ಅಜ್ಜಿ ಕುರ್ಚಿಯಲ್ಲಿ ಕುಳಿತು ಮಂದಹಾಸ ಬೀರುತ್ತಿದ್ದರು.ನಾನು ಅವರನ್ನ ಇದೇ ಮೊದಲ ಬಾರಿಗೆ ನೋಡುತ್ತಿದ್ದೆ... ಅವರ ನಗುವಿನಲ್ಲಿ ಅದೇನೋ ಆಕರ್ಷಣೆ ಇತ್ತು... 
ನಾ ಕೇಳಿದೆ , ಏನ್ ದೊಡ್ದಮಾ ನಿದ್ದೆ ಬರ್ಲಿಲ್ವಾ ??!
ಉತ್ತರವಿಲ್ಲ ... ಬರೀ ನಗು... !!
ಇನ್ನೊಂದು ಬಾರಿ ಕೇಳಿದೆ !
ಮತ್ತೆ ನಗುತ್ತಾ , ' ಇವತ್ತು ಮಾತ್ರ ನಾನಿಲ್ಲಿ ಇರೋದು!!' ಎಂಬ ಉತ್ತರ ಬಂತು 
ನನ್ನ ಪ್ರಶ್ನೆಗೆ ಇದು ಉತ್ತರ ಅಲ್ಲ ಎಂದು ಮೂರನೆಯ ಬಾರಿಗೆ ಅದೇ ಪ್ರಶ್ನೆ ಕೇಳಿದೆ !
ಮತ್ತೆ ' ಇವತ್ತು ಮಾತ್ರ ನಾನಿಲ್ಲಿ ಇರೋದು!!' ಎಂದರು  ನಗು ನಗುತ್ತಾ !
ಛೆ ! ಇವರಿಗೆಲ್ಲೋ ಕಿವಿ ಸರಿಯಾಗಿ ಕೇಳಿಸುವುದಿಲ್ಲ ಎಂದು ಕೊಂಡು ರೂಮಿನತ್ತ ನಡೆದೆ ಮತ್ತು ಕಣ್ ಮುಚ್ಚಿ  ಮಲಗಿದೆ .

ಮರು ದಿನ ಬೆಳಗ್ಗೆ ತಿಂಡಿ ತಿನ್ನುತ್ತಿರುವಾಗ ಪಕ್ಕದ್ಮನೆಯಿಂದ ಮಧ್ಯಾಹ್ನದ ಊಟಕ್ಕೆ ಕರೆ ಬಂದಿತ್ತು. ಒಹ್ ! ಏನೋ ವಿಶೇಷವಿರಬೇಕು , ಊಟಕ್ಕೆ ಸರಿಯಾಗಿ ಹೋದರಾಯಿತು ಎಂದುಕೊಂಡೆ .
ಹನ್ನೆರಡು ಗಂಟೆಗೆ ಸರಿಯಾಗಿ ಅವರ ಮನೆಯತ್ತ ನಡೆದೆ. ಹಿಂದಿನ ರಾತ್ರಿ ಸುರಿದ ಭಾರೀ ಮಳೆಗೆ ವಾತಾವರಣ ತಂಪಾಗಿತ್ತು ಮತ್ತು ಮಧ್ಯಾಹ್ನದಲ್ಲಿಯೂ ಸ್ವಲ್ಪ ಸ್ವಲ್ಪ ಚಳಿಯ ಅನುಭವ ವಾಗುತಿತ್ತು .
ಅಲ್ಲಿಗೆ ಹೋದವನೇ ಆ ಮನೆಯವರಲ್ಲಿ ಕೇಳಿದೆ , ಏನು ಇವತ್ತು ವಿಶೇಷ ?? 
ಹಾ, ಇವತ್ತು ನನ್ನ ಅಮ್ಮನ ತಿಥಿ.... ! ಅದಕ್ಕೆ ನಿಮ್ಮನೆಲ್ಲ ಊಟಕ್ಕೆ ಕರೆದದ್ದು , ನೀವು ಬಂದದ್ದು ತುಂಬಾ ಖುಷಿ ಆಯಿತು , ಊಟ ಮಾಡ್ಕೊಂಡು ಹೋಗಿ ಆಯ್ತಾ .. ಎಂದರು,
ಸರಿ ಮನೆಯ ಒಳಾಂಗಣವನ್ನು ದಿಟ್ಟಿಸುತ್ತಾ ಇದ್ದೆ...  ಹಾಗೆಯೇ ...ಗೋಡೆಯತ್ತ ಕಣ್ ಹಾಯಿಸಿದಾಗ ನನಗೆ ಆಶರ್ಯ , ಆಘಾತ ಎರಡೂ ಕಾದಿತ್ತು!! 

ನಾ ನಿನ್ನೆ ನೋಡಿದ್ದ ಅಜ್ಜಿ ಇಂದೂ ಸಹ ಅದೇ ನಗುವಿನೊಂದಿಗೆ ಅದೇ ಭಂಗಿಯಲ್ಲಿ ಅದೇ ಕುರ್ಚಿಯಲ್ಲಿ ಕುಳಿತಿದ್ದರು. ಆದರೆ ಗೋಡೆಗೆ ತೂಗು ಹಾಕಿದ್ದ ಫೋಟೋದಲ್ಲಿ !!

ಅದುವರೆಗೂ ಚಳಿಯಾಗುತ್ತಿದ್ದ ನನಗೆ ಈಗ ಸಣ್ಣಗೆ ಸೆಕೆಯಾಗಲು ಶುರುವಾಯಿತು ಜೊತೆಗೆ ನಡುಕವೂ ಕೂಡ !!

'ಈಗ ಬರ್ತೇನೆ' ಎಂದು  ಊಟವೂ ಮಾಡದೆ ಹೋದ ನನಗೆ ಒಂದು ವಾರಗಳ ಕಾಲ ಜ್ವರ ತೀವ್ರವಾಗಿ ಕಾಡಿತ್ತು .!!

Monday 30 April 2012

'ಆಕ್ಸಿಡೆಂಟ್ '


ಎಂದಿನಂತೆ ಇಂದೂ ಬೆಳಗ್ಗೆ ಏಳುವುದು ಸ್ವಲ್ಪ ತಡವಾಗಿತ್ತು, ಅವಸರ ಅವಸರದಿಂದಲೇ ಬೆಳಗ್ಗಿನ ಕೆಲಸ ಕಾರ್ಯಗಳನ್ನು ಮುಗಿಸಿ ರೂಮಿನಿಂದ ಹೊರಬಿದ್ದೆನು. ಅದಾಗಲೇ ಗೇಟಿನ ಬಳಿ ನಮ್ಮ ಓನರ್ ನ ನಾಯಿ ನನ್ನ ದಾರಿಗೆ ಅಡ್ಡ ನಿಂತು ಏನನ್ನೋ ಹೇಳಲು ಬಯಸುತ್ತಿತ್ತು. ಅದರ ಮಾತಿಗೆ ಕಿವಿಗೊಡದೆ ಸೀದಾ ಗೇಟ್ಎಳೆದು ಕೊಂಡು ಕುಮಾರಣ್ಣನ ಹೋಟೆಲ್ ನತ್ತ ನಡೆದೆನು. ಹೊರಗಡೆ ವಾತಾವರಣ ತಿಳಿಯಾಗಿತ್ತು ಮತ್ತು ಎಲ್ಲೊ ಮಳೆಯಾಗಿರುವ ಸೂಚನೆಯೋ ಎಂಬಂತೆ ತಣ್ಣನೆಯೆ ಗಾಳಿ ಬೀಸುತ್ತಿತ್ತು.........
ಕುಮಾರಣ್ಣನ ಇಡ್ಲಿ ತೊವ್ವೆ ,ಚಾ ಕುಡಿದು ಬಸ್ಸ್ಟ್ಯಾಂಡ್ ನತ್ತ ನಡೆದೆ. ಬಸ್ಸ್ಟ್ಯಾಂಡ್ ನಲ್ಲಿ ಯಾವತ್ತಿನ ತರಹ 'ಹೌಸ್ ಫುಲ್' ಪ್ರದರ್ಶನವಿರಲಿಲ್ಲ ಮತ್ತು ತಂಬಾಕಿನ ಕಮಟು ವಾಸನೆಯೂ ಇರಲಿಲ್ಲ!!.ಬಹಳ ಸಮಯದ ನಂತರ ಇಂದು ಬಸ್ಸ್ಟ್ಯಾಂಡ್ ನಲ್ಲಿ 'ಫ್ರೆಶ್ ಏರ್' ಸಿಕ್ಕಿತ್ತು ನಂಗೆ. ಹಾಗಾಗಿ ನನಗೂ 'ಧಂ' ಹೊಡೆಯುವ ಮನಸ್ಸಾಗಲಿಲ್ಲ.ಹೀಗೆ ಸ್ವಲ್ಪ ಹೊತ್ತು ಕುಳಿತು ಏನನ್ನೋ ಯೋಚಿಸುತ್ತಿದ್ದಾಗ ನಮ್ಮ ಕೆ ಎಸ್ ಆರ್ ಟಿ ಸಿ ಲೋಕಲ್ ಗಾಡಿ ಬಂದೆ ಬಿಟ್ಟಿತು. ಬಸ್ಸನ್ನು ಹತ್ತಿದವನೇ ಕಂಡ ಕ್ತ್ರ್ಗಗೆ ತಿಂಗಳ ಪಾಸನ್ನು ತೋರಿಸುತ್ತ ಕಿಟಕಿ ಬಳಿಯ ಸೀಟಲ್ಲಿ ಕುಳಿತೆ.ಬಸ್ಸು ಮುಂದಕ್ಕೆ ಚಲಿಸುತ್ತಿರುವಾಗ ತಣ್ಣನೆಯ ಗಾಳಿ ಮುಖವೆಲ್ಲ ಹರಡಿತು,ಹಾಗೆ ಗಾಳಿಗೆ ಮುಖ ವೊಡ್ದುತ್ತಿರಲು ಪಕ್ಕದಲ್ಲಿ ಯಾರೋ ಹಾರ್ನ್ ಮಾಡಿದ್ದು ಕೇಳಿಸಿತು. ಇಣುಕಿದರೆ ಗೆಳೆಯ ಗಿರೀಶ ತನ್ನ ಪಲ್ಸರ್ ನಲ್ಲಿ ಬರಲು ಕರೆಯುತ್ತಿದ್ದ. ಮುಂದಿನ ನಿಲ್ದಾಣದಲ್ಲಿ ಸಿಗುವೆ ಎಂದು ಕೈ ಸನ್ನೆಯ ಮೂಲಕ ತಿಳಿಸಿದೆ. ಮುಂದಿನ ಸ್ಟಾಪ್ ನಲ್ಲಿ ಬಸ್ಸಿಂದಿಳಿದು ಬೈಕ್ ಹತ್ತಿದೆ. ಈತನೋ ಬೈಕ್ ಓಡಿಸುವುದರಲ್ಲ್ಲಿ ಎರಡು ಬಾರಿ ಜಿಲ್ಲಾ ಚಾಂಪಿಯನ್ . ಎಂತಹ ಸಂದುಗೊಂದು ಗಳಲ್ಲಿಯೂ ಸಹ ಬಹಳ ಸಲೀಸಾಗಿ ಗಾಡಿ ಓಡಿಸಬಲ್ಲ ಚತುರ.ಆದರೆ ಸಹ ಸವಾರರ ಗತಿ ದೇವ್ರೇ ಗತಿ !!. ಬಸ್ಸು , ಕಾರು , ಲಾರಿ ..... ಹೀಗೆ ಹಲವಾರು ವಾಹನಗಳನ್ನ ಹಿಂದಿಕ್ಕಿ ಶರವೇಗದಿಂದ ಸಾಗುತಿತ್ತು ನಮ್ಮ ಪಲ್ಸರ್. ಬೈಕು ಕಂಕನಾಡಿ ರಸ್ತೆ ದಾಟಿ ಪಂಪ್ ವೆಲ್ ನತ್ತ ಸಾಗುತಿತ್ತು.....
ಹಾ !!, ಇನ್ನು ಕಾಲೇಜಿಗೆ ಕೇವಲ ಐದೇ ಕಿಲೋಮೀಟರು . ಹೀಗೆ ಸಾಗುತ್ತಿರಲು ಎದುರುಗಡೆಯಿಂದ ಒಂದು ಲಾರಿ ನಿಧಾನವಾಗಿ ಸಾಗುತಿತ್ತು. ಅದೇ ನಮ್ಮೊರಿನ ಮರಳು ಸಾಗಾಟದ ಲಾರಿ !!. ಮನಸ್ಸಲ್ಲೇ ಏನನ್ನೋ ಗೊಣಗಿದ ಗಿರೀಶ ಲಾರಿಯನ್ನ ಹಿಂದಿಕ್ಕಲು ಗೇರ್ ಶಿಫ್ಟ್ ಮಾಡಿ ಜೋರಾಗಿ ಅಕ್ಸಿಲೆಟರ್ ಕೊಟ್ಟ. ಆದರೆ ವಿಧಿ ಏನನ್ನೋ ಬಯಸಿತ್ತು.ಲಾರಿಯವರು ಮರಳಿಗೆ ಸರಿಯಾದ ಮುಚ್ಚಿಗೆ ಹಾಕಿರಲಿಲ್ಲ,ಪರಿಣಾಮ ಮರಳು ಕಣಗಳು ನಮ್ಮಿಬ್ಬರ ಕಣ್ಣು ಹೊಕ್ಕಿದವು.ಗಿರೀಶನಿಗೆ ಆಗಲೇ ನಿಯಂತ್ರಣ ತಪ್ಪಿ , ಬೈಕ್ ನ ಹ್ಯಾಂಡಲ್ ಲಾರಿಯ ಮೂತಿಗೆ ಒರೆಸಿತು!.........
ನಾನಿನ್ನೂ ಗಾಳಿಯಲ್ಲಿ ತೇಲುತ್ತಿದ್ದೆ. ತೇಲುತ್ತ ಬಂದವನೇ ಡಿಕ್ಕಿ ಹೊಡೆದದ್ದು ರಸ್ತೆ ವಿಭಾಜಕಕ್ಕೆ!!! ಕಷ್ಟ ಪಟ್ಟು ಕಣ್ಣನ್ನು ತೆರೆಯಲು ಪ್ರಯತ್ನಿಸಿದೆ . ಯೆನಾಸ್ಚರ್ಯ!! ನನಗೆ ಎಲ್ಲವೂ ಸ್ಪಷ್ಟವಾಗಿ ಕಾಣುತ್ತಿದೆ, ಕಾರಣ ನಾನಿನ್ನೂ ಬಸ್ಸಲ್ಲೇ ಕುಳಿತಿದ್ದೇನೆ !!.ಕಂಡಿದ್ದು ಕನಸು ಎಂದು ಸ್ವಲ್ಪ ಸಮಾಧಾನವಾಯಿತು. ಆದರೆ ಬಸ್ಸಲ್ಲಿ ಯಾರೂ ಇರಲಿಲ್ಲ ಎಲ್ಲರೂ ಕೆಳಗೆ ಇಳಿದಿದ್ದರು. ಕಿಟಕಿಯಿಂದ ಹಿಂದೆ ಇಣುಕಿದರೆ ವಾಹನಗಳು ಸಾಲುಗಟ್ಟಿ ನಿಂತಿವೆ. ಏನಾಗಿದೆ ನೋಡೋಣ ಎಂದು ಕೆಳಗೆ ಇಳಿದರೆ..... ಇಬ್ಬರು ವಿಧ್ಯಾರ್ಥಿಗಳು ರಸ್ತೆಯ ನಡುವೆ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ, ಬದಿಯಲ್ಲಿ ಅದೇ ಮರಳು ಸಾಗಾಟದ ವಾಹನ ಮೂತಿ ಜಜ್ಜಿಸಿಕೊಂಡು ನಿಂತಿದೆ !! . ಸುತ್ತಲೂ ಸೇರಿದ ಜನ ಪೋಲಿಸು , ಅಂಬುಲೆನ್ಸ್ ಗೆ ಕಾಯುತ್ತಿದ್ದಾರೆ. ಯಾರೊಬ್ಬರು ಅವರನ್ನ ಆಸ್ಪತ್ರೆಗೆ ಸಾಗಿಸುವ ಗೋಜಿಗೆ ಹೋಗಲಿಲ್ಲ. ಇದನ್ನೆಲ್ಲಾ ನೋಡಿದ ನಾನು ಬೆವೆತು ನೀರಾದೆ. ನಾನು ಇಷ್ಟ್ಹೊತ್ತು ಕಂಡದ್ದು ' ಸಿಕ್ಸ್ತ್ ಸೇನ್ಸೋ ' ಅಥವಾ ಕೇವಲ ಕಾಕತಾಳೀಯವೋ ಎಂದು ತಬ್ಬಿಬ್ಬುಗೊಂಡೆ. ಇಂದು ಕಾಲೇಜ್ ಬೇಡವೆಂದು ತೀರ್ಮಾನಿಸಿ ತಿರುಗಿ ರೂಂನತ್ತ ನಡೆದೆ.

ದ್ವಿಚಕ್ರ ಸವಾರರಿಗೊಂದು ಮಾತು: 'ಪ್ರಯಾಣದ ದೂರ ಎಷ್ಟೇ ಇರಲಿ , ಹೆಲ್ಮೆಟ್ ನಿಮ್ಮ ಜೊತೆಗಿರಲಿ !! .'

Saturday 28 April 2012

ನಾರಾಯಣ ಆಚಾರ್ರ ಮೊಬೈಲ್ ಬಿಸಿನೆಸ್ಸ್ !'


ಹಿಂದಿನ ರಾತ್ರಿ ಕರೆಂಟ್ ಹೋಗಿದ್ದರಿಂದಲೋ ಏನೋ ಇಂದು ಬೆಳಗ್ಗೆ ತುಸು ಬೇಗನೆ ಎಚ್ಚರವಾಯಿತು. ಚಹಾ ಮಾಡೋಣವೆಂದು ಸ್ಟವ್ ಹಚ್ಚಲು ಕಡ್ಡಿ ಗೀರಿದಾಗಲೇ ನೆನಪಾದದ್ದು ಹಿಂದಿನ ದಿನವೇ ಗ್ಯಾಸ್ ಖಾಲಿಯಾಗಿದೆ ಎಂದು. ಹಾಗಾಗಿ ಇಂದು ತಿಂಡಿ ನಮ್ಮ ನಾರಾಯಣ ಆಚಾರ್ರ ಮೊಬೈಲ್ ಕ್ಯಾಂಟೀನ್ನಲ್ಲಿ ತಿನ್ನೋಣ ಎಂದು ತೀರ್ಮಾನಿಸಿದೆ. 


ನಾರಾಯಣ ಆಚಾರ್ರ ಮೊಬೈಲ್ ಕ್ಯಾಂಟೀನ್ ಮಂಗಳೂರಿನ ಜನಪ್ರಿಯ 'ಪುಟಾಣಿ' ಹೋಟೆಲ್ ಗಳಲ್ಲೊಂದು. ಪ್ರತಿ ದಿನ ಬೆಳಗ್ಗೆ ಆರು ಗಂಟೆಗೆ ಇವರ ರಿಕ್ಷಾ ಹೋಟೆಲ್   'ಸ್ಟೇಟ್ ಬ್ಯಾಂಕ್' ಬಳಿಯ ಒಂದು ಮೂಲೆಯಲ್ಲಿ ಬಂದು ನಿಲ್ಲುತ್ತಿತ್ತು. ಸ್ಟೇಟ್ ಬ್ಯಾಂಕ್ ಎಂದರೆ ನಮ್ಮೂರಿನ ಬಸ್ಟ್ಯಾಂಡ್ ಹೆಸರು . ಬಸ್ಟ್ಯಾಂಡ್ ಪಕ್ಕದಲ್ಲೇ ಸ್ಟೇಟ್ ಬ್ಯಾಂಕ್ ಪ್ರಧಾನ ಕಚೇರಿ ಇರುವುದರಿಂದ ಈ ಹೆಸರು ಬಂದಿತೋ ಏನೋ !!.ಈ ಬಸ್ಟ್ಯಾಂಡ್ ಎಷ್ಟು ಪ್ರಸಿದ್ದವೆಂದರೆ ಕೆಲವರಂತೂ ಬಸ್ಟ್ಯಾಂಡ್ ಎಲ್ಲಿ ಎಂದು ಕೇಳಿದರೆ 'ಗೊತ್ತಿಲ್ಲ' ಎನ್ನುತ್ತಾರೆ , ಬದಲಾಗಿ 'ಸ್ಟೇಟ್ ಬ್ಯಾಂಕ್ ' ಗೆ ದಾರಿ ಯಾವುದು ಎಂದು ಕೇಳಿದರೆ ನಗು ನಗುತ್ತ ಉತ್ತರಿಸುತ್ತಾರೆ. ಇವರ ಈ ಹೋಟೆಲ್ ಅನೇಕರಿಗೆ ಬೆಳಗಿನ ಉಪಾಹಾರ ನೀಡುತ್ತಿತ್ತು . ಡ್ರೈವರ್ , ಕಂಡಕ್ಟರ್ , ವಿಧ್ಯಾರ್ಥಿಗಳು . . . .  ಹೀಗೆ ಅನೇಕರು ಬಂದು ಇಲ್ಲಿ ಬೆಳಗ್ಗಿನ ಉಪಾಹಾರ ಪೂರೈಸುತ್ತಿದ್ದರು. ಇವರ ಹೋಟೆಲ್ ನ ವಿಶೇಷವೆಂದರೆ ಬೆಳಗ್ಗೆ ಆರರಿಂದ ಎಂಟರವರೆಗೆ ಮಾತ್ರ ಇವರ ಹೋಟೆಲ್ ತೆರೆದಿರುತ್ತದೆ ಹಾಗಾಗಿ ಜನ ಸಾಲುಗಟ್ಟಿ ನಿಂತಿರುತ್ತಾರೆ ಇವರು ಮಾಡುವ ಇಡ್ಲಿ , ವಡೆ , ಬನ್ಸ್, ಉಪ್ಪಿಟ್ಟು , ಅವಲಕ್ಕಿ ........ ಇತ್ಯಾದಿಗಳನ್ನ ಸವಿಯಲು .

ಆಚಾರ್ರು ದಿನಾಲು ಐದರಿಂದ ಆರು ತಿಂಡಿಗಳನ್ನು ಮಾಡುತ್ತಿದ್ದರು.ಯಾವುದನ್ನೂ ಕ್ಯಾಂಟೀನ್ನಲ್ಲಿ ಮಾಡುತ್ತಿರಲಿಲ್ಲ ಬದಲಾಗಿ ಮನೆಯಲ್ಲಿ ತಯಾರಿಸಿ ತಂದು ಬೇರೆಯವರಿಗೆ ತಿನ್ನಿಸುತ್ತಿದ್ದರು. ನನಗೆ ಆಚಾರ್ರು ಪರಿಚಯವಾದದ್ದು ಎರಡು ವರ್ಷಗಳ ಹಿಂದೆ. ನಾನು ಮಂಗಳೂರಿಗೆ ಬಂದ ಪ್ರಾರಂಭದ ದಿನಗಳಿಂದಲೂ ಅಲ್ಲೇ ಬೆಳಗಿನ ಉಪಾಹಾರ ಸೇವಿಸುತ್ತಿದ್ದೆ.ಅವರು ಮಾಡುತ್ತಿದ್ದ ಇಡ್ಲಿ ಸಾಂಬಾರ್ ಬಹುಶಃ ಮಂಗಳೂರಲಿನಲ್ಲೆಲ್ಲೂ ಸಿಗುತ್ತಿರಲಿಲ್ಲ. ದಿನಗಳೆದಂತೆ ಬಹಳ ಆತ್ಮೀಯರಾದ ಆಚಾರ್ರು ನನಗೂ 'ಒಗ್ಗರಣೆ' ಹಾಕುವುದನ್ನ ಕಲಿಸಿದ್ದರು. ಇವರು ಹೇಳಿಕೊಟ್ಟ ಕೆಲವೊಂದು ತಿಂಡಿಗಳನ್ನು ನಾನು ರೂಮಲ್ಲಿ ನನ್ನ ಮೇಲೆಯೇ ಪ್ರಯೋಗಿಸಿಕೊಂಡದ್ದೂ ಇದೆ !

ಆಚಾರ್ರ ಈ ಹೋಟೆಲ್ನ ಹಿಂದೆ ಒಂದು ಕಥೆಯಿದೆ. ನಾರಾಯಣ ಆಚಾರ್ರ ಮಗ ನವೀನ ದೂರದ ಮುಂಬೈನಲ್ಲಿ ಉದ್ಯೋಗದಲ್ಲಿದ್ದಾನೆ. ಊರಿನಲ್ಲಿ ವೃದ್ಧ ತಂದೆ , ತಾಯಿ ಮಾತ್ರ ಇರುವುದು. ಮುಂಬೈಗೆ ಹೋದ ಬಳಿಕ ನವೀನ ,ತಂದೆಗೆ ಒಂದು ಮೊಬೈಲ್ ತೆಗೆಸಿ ಕೊಡುತ್ತಾನೆ. ಇದೇ ಮೊಬೈಲ್ನಿಂದ ಆಚಾರ್ರಿಗೆ ಒಂದು ವಿನೂತನ 'ಐಡಿಯಾ' ಬಂದದ್ದು ಅದೇನೆಂದರೆ ಮೊಬೈಲ್ ಚಹಾ ಅಂಗಡಿ !!. ಇವರು ಇದ್ದ ಮನೆಯ ಸಮೀಪವೇ ಒಂದು ವಾಣಿಜ್ಯ ಕಟ್ಟಡವಿತ್ತು. ಇಲ್ಲಿ ಹಲವಾರು ಕಛೇರಿಗಳು ಕಾರ್ಯನಿರ್ವಹಿಸುತ್ತಿದ್ದವು ಇವರಿಗೆಲ್ಲ ಚಹಾ ಬೆಕಾದರೆ ಅನತಿ  ದೂರದಲ್ಲಿದ್ದ ಹೋಟೆಲ್ನಿಂದ ತರಿಸಿಕೊಳ್ಳಬೇಕಾಗಿತ್ತು. ಚಹಾ ತಲುಪುವಾಗ ಒಂದೋ ತಣ್ಣಗಾಗಿರುತ್ತಿತ್ತು ಇಲ್ಲವೇ ಇನ್ನೇನೋ ಆಗಿರುತಿತ್ತು. ಇದನ್ನು ಕಂಡ ಆಚಾರ್ರು ಒಂದು ವಿನೂತನ ಯೋಜನೆ ಪ್ರಾರಂಭಿಸಿದರು . ಅದೇನೆಂದರೆ ಯಾರ್ಯಾರಿಗೆ ಚಹಾ ಬೇಕೋ ಅವರು ಆಚಾರ್ರ ಮೊಬೈಲ್ಗೆ ಮಿಸ್ ಕಾಲ್ ಕೊಟ್ಟರೆ ಸಾಕು , ಇವರು ಚಹಾದೊಂದಿಗೆ ಹಾಜರು !!.ಬೆಳಗ್ಗೆ ಹತ್ತರಿಂದ ಹನ್ನೊಂದುವರೆ ಯವರೆಗೆ ಇವರು ಮಿಸ್ ಕಾಲ್ ಗೆ ಸ್ಪಂದಿಸುತ್ತಿದ್ದರು. ಇವರ ಕಾರ್ಯವ್ಯಾಪ್ತಿ ಆ ಕಟ್ಟಡ ಕ್ಕೆ ಮಾತ್ರ ಸೀಮಿತಗೊಂಡಿತ್ತು. ನಂತರ ಯಾರೋ ಈ ಕ್ಯಾಂಟೀನ್ ನ ಬಗ್ಗೆ ಹೇಳಿದರು, ಹಾಗೆ ಸ್ವ ಸಹಾಯ ಸಂಘದವರ ನೆರವಿನಿಂದ ಈ ಮೊಬೈಲ್ ಕ್ಯಾಂಟೀನ್ ಪ್ರಾರಂಭಿಸಿದರು. ಹಲವಾರು ಜನರ ದಿನ ಪ್ರಾರಂಭವಾಗುತ್ತಿದ್ದುದು ಇವರ ಕ್ಯಾಂಟೀನ್ ನಿಂದಲೇ . ಇವರು ಮಾಡುವ ಇಡ್ಲಿ ಸಾಂಬಾರ್ . ಬನ್ಸ್ , ಬಹಳ ಸೊಗಸಾಗಿರುತ್ತದೆ ಮತ್ತು ಇವರು ಸ್ವಚ್ಚತೆಗೆ ಬಹಳ ಪ್ರಾಮುಖ್ಯತೆಯನ್ನು ಕೊಡುತ್ತಿದ್ದರು ಹಾಗಾಗಿ ಜನ ಇವರ ಕ್ಯಾಂಟೀನನ್ನು ಬಹಳವಾಗಿ ಮೆಚ್ಚುತ್ತಿದ್ದರು. ಇವರ ಕ್ಯಾಂಟೀನ್ ಇಷ್ಟೊಂದು ಜನಪ್ರಿಯ ಪಡೆದಿದ್ದರೂ ಇವರ 'ಮೊಬೈಲ್' ಚಹಾ ಅಂಗಡಿ ಮಾತ್ರ ಇನ್ನೂ ಕಾರ್ಯಾಚರಿಸುತ್ತಿದೆ.

ನಾವು ಇಂದಿನ  ದಿನಗಳಲ್ಲಿ ಮೊಬೈಲ್ ಫೋನನ್ನು ಅಗತ್ಯಕ್ಕಿಂತ ತುಸು ಹೆಚ್ಚಾಗಿಯೇ ಬಳಸುತ್ತಿದ್ದೇವೆ . ಕೆಲವರಂತೂ ಕರೆಮಾಡುವುದನ್ನು ಬಿಟ್ಟು ಬೇರೆ ಎಲ್ಲಾ ಕೆಲಸಕ್ಕೂ ಮೊಬೈಲ್ ಬಳಸುತ್ತಾರೆ. ಉದಾ : ಫೇಸ್ಬುಕ್ ,ಆರ್ಕುಟ್ ,ಸಿನಿಮಾ ನೋಡಲು ಇತ್ಯಾದಿ ..... ನಮ್ಮ ಆಚಾರ್ರಂತೆ ಯೋಚನೆ ಮಾಡುವವರು ಬಹಳ ಕಮ್ಮಿ .
ಅದೇನೇ ಇರಲಿ ಇವತ್ತು ವಿಶೇಷವಾಗಿ ಶ್ಯಾವಿಗೆ ಕೂರ್ಮ ಮಾಡಿದ್ದಾರಂತೆ ಹಾಗೂ ನನಗೆ ಗ್ಯಾಸ್ ಸಿಲಿಂಡರ್ ಸಹ  ಬುಕ್ ಮಾಡಬೇಕಿದೆ . 

ನಾ ಹೋಗಿ ಬರಲಾ ??!